ಶಿರಸಿ: ಚೆನ್ನೈನ ಹಿಂದುಸ್ತಾನ್ ಹಾಗೂ ಚಾರ್ಲ್ಸ್ ಗ್ರುಪ್ ಸಹಕಾರದಲ್ಲಿ ನಡೆಸಲಾದ ಗ್ಲೋಬಲ್ ಚೈಲ್ಡ್ ಪ್ರೊಡಿಜಿ ಅವಾರ್ಡ್ಗೆ ಶಿರಸಿಯ ತುಳಸಿ ಹೆಗಡೆ ಆಯ್ಕೆಯಾಗಿದ್ದಾರೆ.
ಜಗತ್ತಿನ ನೂರಾ ಮೂವತ್ತು ದೇಶಗಳಲ್ಲಿ ಕಲೆ, ಕ್ರೀಡೆ, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೂರು ಸಾಧಕ ಮಕ್ಕಳ ಪಟ್ಟಿಗೆ ಯಕ್ಷಗಾನ ಯುವ ಕಲಾವಿದೆ, ಶಿರಸಿಯ ತುಳಸಿ ಹೆಗಡೆ ಹೆಸರು ಸೇರ್ಪಡೆಗೊಂಡಿದೆ .ಮಕ್ಕಳ ಅರ್ಹತೆ, ಸಾಧನೆ, ಅವರ ನಿರಂತರ ಶ್ರಮ ಪರಿಗಣಿಸಿ ತಜ್ಞರ ಸಮಿತಿ ನೂರು ಸಾಧಕ ಮಕ್ಕಳನ್ನು ಆಯ್ಕೆ ಮಾಡಿದ್ದು ಈ ಪಟ್ಟಿಯಲ್ಲಿ ಕನ್ನಡದ ಕಲೆ ಯಕ್ಷಗಾನದ ಮೂಲಕ ಹೆಸರಾದ ತುಳಸಿ ಹೆಗಡೆ ಕೂಡ ಒಬ್ಬರು.
ವಿಶ್ವಶಾಂತಿಗಾಗಿ ಗೆಜ್ಜೆ ಕಟ್ಟಿದ ತುಳಸಿ ಹೆಗಡೆ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ವಿಶ್ವಶಾಂತಿ ಸರಣಿಯಲ್ಲಿ ಪೌರಾಣಿಕ ಕಥಾ ಭಾಗದ ಹೊಸ ಹೊಸ ಯಕ್ಷ ರೂಪಕಗಳನ್ನು ಪ್ರದರ್ಶನ ನೀಡುತ್ತಿದ್ದಾಳೆ. ಈಗಾಗಲೇ ವಿಶ್ವದಾಖಲೆ ಮಾಡಿದ ಈಕೆ ಟೈಮ್ಸ ಆಫ್ ಇಂಡಿಯಾ ನೀಡುವ ದೇಶದ ೨೧ ವರ್ಷದೊಳಗಿನ ೨೧ ಸಾಧಕ ಮಕ್ಕಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು ದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರಿಂದ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಚೆನ್ನೈ ರೋಟರಿ ಕ್ಲಬ್ ನೀಡುವ ಯಂಗ್ ಅಚೀವರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಈಕೆಗೆ ಸಣ್ಣ ವಯಸ್ಸಿನಲ್ಲೇ ಹೆಗಲೇರಿವೆ.
ಯಕ್ಷಗಾನ ಕಲೆಯ ಮೂಲಕ ನಿರಂತರವಾಗಿ ವಿಶ್ವಶಾಂತಿ ಸಂದೇಶ ಸಾರುವ ಕಾರಣಕ್ಕೆ ಈ ಜಾಗತಿಕ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ. ವಿವಿಧ ಕ್ಷೇತ್ರದ ಸಾಧಕ ಗಣ್ಯರು ಜೂನ್ ೨೬ರಂದು ಯುನೈಟೆಡ್ ಕಿಂಗ್ ಡಮ್ ನ ಬ್ರಿಟಿಷ್ ಪಾರ್ಲಿಮೆಂಟ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಸ್ಥಾಪಕ ಪ್ರಶಾಂತಕುಮಾರ ಪಾಂಡೇ ತಿಳಿಸಿದ್ದಾರೆ.